ರಾಕ್ಷಸಿ ಚಿತ್ರದ ಆಡಿಯೋ, ಟೀಸರ್ ಬಿಡುಗಡೆ ಕಾರ್ಯಕ್ರಮ ಭಾನುವಾರ ಬಸವೇಶ್ವರ ನಗರದ ಅಂಬೇಡ್ಕರ್ ಮೈದಾನದಲ್ಲಿ ಏರ್ಪಾಟಾಗಿತ್ತು. ಆದರೆ ಮಳೆಯ ಅಬ್ಬರದಿಂದ ರದ್ದಾಗಿತ್ತು. ನಂತರ ಸೋಮವಾರ ಬೆಳಿಗ್ಗೆ ಚಾಲನೆಗೊಂಡ ಆ ಕಾರ್ಯಕ್ರಮಕ್ಕೆ ಮೆರಗು ತಂದುಕೊಟ್ಟಿದ್ದು ಪವರ್ ಸ್ಟಾರ್ ಪುನೀತ್, ಮತ್ತು ತಮಿಳು ನಟ ವಿಶಾಲ್. ನಿರೂಪಕರು ಪುನೀತ್ ಕೈಗೆ ಮೈಕನ್ನು ಕೊಟ್ಟಾಗ ಮೊದಲು ಅತಿಥಿಯಾಗಿ ಆಗಮಿಸಿರುವ ವಿಶಾಲ್ ಮಾತನಾಡಲಿ ಎಂದು ಕೋರಿಕೊಂಡರು. ಇವರ ಕೋರಿಕೆಯನ್ನು ಸ್ವೀಕರಿಸಿದ ವಿಶಾಲ್ ನಾನು ಸಾಮಾನ್ಯವಾಗಿ ಸಿನಿಮಾ ಸಮಾರಂಭಗಳಲ್ಲಿ ಭಾಗವಹಿಸಿವುದು ಕಡಿಮೆ. ವೇದಿಕೆ ನನಗೆ ಆಗಿಬರುವುದಿಲ್ಲ. ಪುನೀತ್ ಸರ್ ಬರುತ್ತಾರೆ ಎಂದು ತಿಳಿದೊಡನೆ ಖುಷಿಯಿಂದ ಒಪ್ಪಿಕೊಂಡೆ. ಮನೆಯಲ್ಲಿ ಅವರ ಸಿನಿಮಾಗಳನ್ನು ನೋಡುವಾಗ ಹಾಡು ಬಂದಲ್ಲಿ ಮ್ಯೂಟ್ ಮಾಡುತ್ತೇನೆ.
ಅಮ್ಮ ಅವರಂತೆ ಡ್ಯಾನ್ಸ್ ಮಾಡಲು ಕಲಿತುಕೋ ಚಿತ್ರರಂಗದಲ್ಲಿ ಉದ್ದಾರ ಆಗುತ್ತಿಯಾ ಎನ್ನುತ್ತಾರೆ. ಚೆನ್ನೈ ಕಲಾವಿದರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದೇನೆ. ಬಿಡುವು ಮಾಡಿಕೊಂಡು ಚಿತ್ರಕ್ಕೆ ಹರಸಲು ಬಂದೆ. ಪ್ರೇಕ್ಷಕರು ದೇವರ ಸಮಾನ. ಚಿತ್ರಮಂದಿರದಲ್ಲ್ಲಿ ಟಿಕೆಟ್ ಖರೀದಿ ಮಾಡಿ ನೋಡುತ್ತೇನೆ ಎಂದರು. ವಿಶಾಲ್ ತಂದೆ ಜಿಕೆ ರೆಡ್ಡಿ ಮುಖ್ಯ ಪಾತ್ರದಲ್ಲಿ ನಟಿಸಿರುವುದು ಖುಷಿ ತಂದಿದೆ. ಈ ಇಳಿ ವಯಸ್ಸಿನಲ್ಲಿ ದೇಹವನ್ನು ಚೆನ್ನಾಗಿ ಕಾಪಾಡಿಕೊಂಡಿದ್ದಾರೆ. ಮಗನಂತೆ ನಾನು ಸಹ ಎತ್ತರವಾಗಿ ಕಾಣಬೇಕೆಂಬ ಆಸೆಯನ್ನು ವ್ಯಕ್ತಪಡಿಸಿ ನಿರ್ಮಾಪಕರಿಗೆ ದುಡ್ಡು ಬರೋ ಹಾಗೆ ಮಾಡುವ ಕೆಲಸ ಪ್ರೇಕ್ಷಕರದು ಅಂತ ಚುಟುಕು ಮಾತಿಗೆ ವಿರಾಮ ಹಾಕಿದರು ಪುನೀತ್ ರಾಜ್ಕುಮಾರ್.
ವರ್ತೂರು ಮೂಲದ ನಾನು ಮೂವತ್ತು ವರ್ಷಗಳ ಹಿಂದೆ ಚೆನ್ನೈಗೆ ವ್ಯವಹಾರಕ್ಕಾಗಿ ಹೋದೆ. ಅಲ್ಲಿ ಹದಿಮೂರು ಚಿತ್ರಗಳಲ್ಲಿ ನಟಿಸಿದರೂ ಕನ್ನಡದಲ್ಲಿ ಅಭಿನಯಿಸಬೇಕಂಬ ತುಡಿತ ಇತ್ತು. ಅದು ರಾಕ್ಷಸಿ ಚಿತ್ರದ ಮೂಲಕ ನಾಯಕಿಯ ತಂದೆಯಾಗಿ ಕಾಣಿಸಿಕೊಂಡಿರುವುದು ತೃಪ್ತಿ ಕೊಟ್ಟಿದೆ. ಅವಕಾಶ ಕೊಟ್ಟ ನಿರ್ಮಾಪಕ, ನಿರ್ದೇಶಕರಿಗೆ ಥ್ಯಾಂಕ್ಸ್ ಎಂಬುದು ಜಿ.ಕೆ.ರೆಡ್ಡಿ ನುಡಿ. ಪೂರ್ಣ ಪ್ರಮಾಣದ ನಾಯಕಿಯಾಗಿ ಕಾಣಿಸಿಕೊಂಡಿದ್ದಕ್ಕೆ ಸಿಂಧು ಲೋಕನಾಥ್ಗೆ ಖುಷಿಕೊಟ್ಟಿದೆಯಂತೆ. ಹಾಗೂ ಹಾಡಿಗೆ ಹೆಜ್ಜೆ ಹಾಕಿ ಮನರಂಜಿಸಿದರು. ತಮಿಳಿನ ಸ್ಟಾರ್ ನಿರ್ದೇಶಕ ಎ.ಆರ್.ಮುರಘದಾಸ್ ಶಿಷ್ಯನಾಗಿರುವ ಆಶ್ರಫ್ ಮೊದಲಬಾರಿ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಕೆ.ಕಲ್ಯಾಣ್ ರಚಿಸಿರುವ ನಾಲ್ಕು ಗೀತೆಗಳಿಗೆ ಆರೋಲ್ಕೊರಲ್ಲಿ ಸಂಗೀತ ಸಂಯೋಜಿಸಿದ್ದಾರೆ. ಸನ್ಮಾನ, ನೃತ್ಯ ನಡೆದ ನಂತರ ದೊಡ್ಡದಾದ ಕ್ರೇನ್ನಲ್ಲಿ ಮೇಲಿನಿಂದ ವೇದಿಕೆಗೆ ದೆವ್ವದ ವೇಷಧಾರಿ ಸಿಡಿ ತಂದುಕೊಟ್ಟದನ್ನು ಗಣ್ಯರು ಸ್ವೀಕರಿಸಿ ಲೋಕಾರ್ಪಣೆ ಮಾಡಿದರು. ಅದ್ದೂರಿ ಸಮಾರಂಭದಲ್ಲಿ ಶುಭಹಾರೈಸಲು ಸೌತ್ ಇಂಡಿಯನ್ ವಾಣಿಜ್ಯ ಮಂಡಳಿ ಅಧ್ಯಕ್ಷ ಕಲ್ಯಾಣ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಥಾಮಸ್ಡಿಸೋಜ, ಹೆಚ್.ಡಿ.ಗಂಗರಾಜು ಆಗಮಿಸಿದ್ದರು. ತಮಿಳಿನ ಪಿಸಾಸು ಚಿತ್ರವನ್ನು ಕನ್ನಡದಲ್ಲಿ ನಿರ್ಮಾಣ ಮಾಡಿ ನಾಯಕನಾಗಿ ನಟಿಸಿದ್ದಾರೆ ನವರಸನ್. ಛಾಯಾಗ್ರಹಣ ಮೋಹನ್, ಸಂಕಲನ ವಿಶಾಲ್, ಕಲೆ ಸೋಮಶೇಖರ್, ಸಾಹಸ ಶಿವು ಅವರದಾಗಿದೆ. ತಾರಬಳಗದಲ್ಲಿ ಕುರಿಪ್ರತಾಪ್, ಕೆಂಪೇಗೌಡ, ಸುಜಿತ್, ಕೃಷ್ಣಮೂರ್ತಿ ನಟಿಸಿರುವ ಚಿತ್ರವು ಸದ್ಯದಲ್ಲೆ ತೆರೆಕಾಣಲಿದೆ.